ಹೆಣ್ಣು ಸಂಕಷ್ಟಕ್ಕೆ ಸಿಲುಕಿದಾಗ, ಹೆದರದೆ ಧೈರ್ಯದಿಂದ ಹೋರಾಡಿದರೆ ಎಂಥ ಸಂದರ್ಭವನ್ನಾದರೂ ಎದುರಿಸಬಹುದು, ಸ್ವಯಂರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ’ಇನ್ ಕಾರ್’ ಚಿತ್ರದ ಮೂಲಕ ನಿರ್ದೇಶಕ ಹರ್ಷವರ್ಧನ ಅವರು ಹೇಳಿದ್ದಾರೆ.
ಪ್ರಮುಖವಾಗಿ ಐದು ಪಾತ್ರಗಳ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಇಡೀ ಚಿತ್ರದ ಕಥೆ ಕಾರಿನ ಪಯಣದಲ್ಲಿಯೇ ಸಾಗುತ್ತದೆ.
ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ನಿರೂಪಿಸಲಾಗಿದೆ. ಯುವತಿಯೊಬ್ಬಳ ಸುತ್ತ ಒಂದೇ ದಿನದಲ್ಲಿ ನಡೆಯುವ ಕಥೆಯಿದಾಗಿದೆ. ನಾಯಕಿ ಸಾಕ್ಷಿ ಗುಲಾಟಿ (ರಿತಿಕಾಸಿಂಗ್) ಕಾಲೇಜಿಗೆ ಹೋಗಲು ಬಸ್ಗಾಗಿ ಕಾಯುತ್ತಿರುವಾಗ, ಸೋದರರಾದ ರಿಚ್ಚಿ, ಯಶ್ ಹಾಗೂ ಈತನ ಮಾಮ ಇನ್ನೋವ ಕಾರಿನಲ್ಲಿ ಈಕೆಯನ್ನು ಅಪಹರಿಸುತ್ತಾರೆ. ವಯಸ್ಕ ಬ್ರಿಜೇಶ್ ಚಲಾಯಿಸುತ್ತಿದ್ದ ಇನ್ನೋವ ಕಾರನ್ನು ಇವರು ಹೈಜಾಕ್ ಮಾಡಿದ್ದು, ಕೊಲೆ ಕೇಸ್ನಲ್ಲಿ ಅಪರಾಧಿಯಾಗಿರುವ ರಿಚ್ಚಿಯನ್ನು ಪೋಲೀಸರಿಂದ ಮರೆಮಾಚಲು ವಾಹನವನ್ನು ಬಳಸಿಕೊಂಡಿರುತ್ತಾರೆ.
ಸಾಕ್ಷಿ ಆ ದುರಳರಿಂದ ತನ್ನನ್ನು ರಕ್ಷಿಸಿಕೊಳ್ಳಲು ಎರಡು ಗಂಟೆ ಸಮಯವಿರುತ್ತದೆ. ನಂತರ ಅವರು ಪಾಣಿಪತ್ ಬಳಿ ಇರುವ ಸುಟ್ಟುಹೋದ ಕಾರ್ಖಾನೆಯಲ್ಲಿ ಅತ್ಯಾಚಾರವೆಸಗಿ ನಂತರ ಆಕೆಯನ್ನು ಸಾಯಿಸಲು ಸಂಚು ರೂಪಿಸಿರುತ್ತಾರೆ. ಎಲ್ಲರೂ ಸುರಕ್ಷಿತ ಸ್ಥಳ ತಲುಪಿದಾಗ ಇವಳನ್ನು ಏನು ಮಾಡುವುದೆಂದು ಚರ್ಚೆ ನಡೆಸುತ್ತಾರೆ. ಇದೇ ಸಮಯದಲ್ಲಿ ಸಾಕ್ಷಿ ಅವರಿಂದ ತಪ್ಪಿಸಿಕೊಳ್ಳಲು ತನ್ನದೆ ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ. ಕೊನೆಗೆ ಸಾಕ್ಷಿ ಆ ನರಕದಿಂದ ಹೇಗೆ ಬದುಕಿ ಹೇಗೆ ಬರುತ್ತಾಳೆ. ಇದಕ್ಕೆ ಆಕೆ ಕಂಡುಕೊಂಡ ದಾರಿ ಎಂತಹುದು? ಇದನ್ನೆಲ್ಲ ಕುತೂಹಲಕಾರಿಯಾಗಿ ಚಿತ್ರದಲ್ಲಿ ಹೇಳಲಾಗಿದೆ.
ನಟಿ ರಿತಿಕಾಸಿಂಗ್ ಅವರೇ ಪೂರ್ತಿ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಅವರ ಪರ್ ಫಾರ್ಮನ್ಸ್ ಅದ್ಭುತ. ಕಿಡ್ನಾಪರ್ ಗಳಾಗಿ ಸಂದೀಪ್ ಗೋಯಟ್, ಮನಿಷ್ಜಾಂಜ್ ಹೋಲಿಯಾ, ಸುನಿಲ್ ಸೋನಿ ಚಾಲಕನಾಗಿ ಗ್ಯಾನ್ ಪ್ರಕಾಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಡೀ ಚಿತ್ರವನ್ನು ಕಸರೊಂದರಲ್ಲಿ ಚಿತ್ರೀಕರಿಸಿರುವ ನಿರ್ದೇಶಕ ಹರ್ಷ್ವರ್ಧನ್ ಅವರ ಶ್ರಮ ಪರದೆ ಮೇಲೆ ಕಾಣಿಸುತ್ತದೆ.
ಮಾಥ್ಯೂಸ್ ಡುಪ್ಲೆಸ್ಸಿ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಮಿಥುನ್ ಗಂಗೋಪಧ್ಯಾಯ ಅವರ ಕ್ಯಾಮೆರಾ ವರ್ಕ್ ಎಫೆಕ್ಟಿವ್ ಆಗಿದೆ. ಅವರ ಕೆಲಸವೇ ಇಲ್ಲಿ ಪ್ರಮುಖ. ಇನ್ಬಾಕ್ಸ್ ಪಿಕ್ಚರ್ಸ್ ಅಡಿಯಲ್ಲಿ ಅಂಜುಮ್ ಖುರೇಶಿ ಹಾಗೂ ಸಾಜಿದ್ ಖುರೇಶಿ ಅವರು ಜನರಿಗೆ ಮೆಸೇಜ್ ಹೇಳುವ ಪ್ರಯತ್ನ ಮಾಡಿದ್ದಾರೆ.